ಅಕ್ರಮ ಮಣ್ಣು ಸಾಗಣೆ ಸೇರಿ ವಿವಿಧ ಆರೋಪಗಳ ಸಾಕ್ಷ್ಯಗಳೊಂದಿಗೆ ಪ್ರತಿಭಟನಾ ಮೆರವಣಿಗೆ, ಜ.19ಕ್ಕೆ ದಾವಣಗೆರೆ ಗ್ರಾಮ
: ಹರಿಹರ ತಾಲೂಕಿನ ದುಗ್ಗತ್ತಿ, ಚಿಕ್ಕಬಿದರೆ ಸೇರಿದಂತೆ ವಿವಿಧ ಗ್ರಾಮಗಳ ರೈತರ ಭೂಕಬಳಿಕೆ, ಕಾಡಜ್ಜಿ ಗ್ರಾಮದ ಕೃಷಿ ಕೇಂದ್ರದ ಸಮೀಪದಿಂದ ಕಲ್ಲೇಶ್ವರ ರೈಸ್ ಮಿಲ್ ಹಿಂಭಾಗಕ್ಕೆ ಮಣ್ಣು ಅಕ್ರಮ ಸಾಗಾಟ, ಅಟ್ರಾಸಿಟಿ ಕೇಸ್, ಜಿಲ್ಲಾ ಉಸ್ತುವಾರಿ ಸಚಿವರ ಭ್ರಷ್ಟಾಚಾರ, ಅವ್ಯವಹಾರದ ವಿರುದ್ಧ ಜನವರಿ 19ರಂದು ಬೃಹತ್ ಪ್ರತಿಭಟನೆ ನಡೆಸಿ, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ಮೆರವಣಿಗೆಯಲ್ಲಿ ತೆರಳಿ ದೂರು ಸಲ್ಲಿಸಲು ಬಿಜೆಪಿ ನಿರ್ಧರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹರಿಹರ ಶಾಸಕ ಬಿ. ಪಿ. ಹರೀಶ್ ಅವರು, ಬೃಹತ್ ಹೋರಾಟ ನಡೆಸುವಂತೆ ಹಾಗೂ ನನ್ನ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಿರುವ ವಿರುದ್ಧ ಪ್ರತಿಭಟನೆ ನಡೆಸುವಂತೆ ರಾಜ್ಯ ಬಿಜೆಪಿ ಸೂಚನೆ ನೀಡಿದೆ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ನಾಗಪ್ಪರನ್ನೊಳಗೊಂಡಂತೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಅಂಬೇಡ್ಕರ್ ಸರ್ಕಲ್ ನಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಮೆರವಣಿಗೆ ಮೂಲಕ ಹದಡಿ ರಸ್ತೆಯಲ್ಲಿರುವ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಅಕ್ರಮ ಮಣ್ಣು ಸಾಗಣೆ ವೇಳೆ ಸ್ಥಳದಲ್ಲಿದ್ದ ಲಾರಿಗಳು, ಕಾರುಗಳ ಬಂದಿದ್ದ ವ್ಯಕ್ತಿಗಳು ಸೇರಿದಂತೆ ಎಲ್ಲಾ ಸಾಕ್ಷ್ಯಗಳನ್ನು ನೀಡಿ ಪೊಲೀಸರಿಗೆ ಲಿಖಿತವಾಗಿ ದೂರು ನೀಡುತ್ತೇವೆ. ಕಠಿಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಇಲ್ಲಿಗೆ ನಿಲ್ಲದು. ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಕಾಡಜ್ಜಿ, ಬಾತಿಗುಡ್ಡ ಸೇರಿದಂತೆ ಹಲವೆಡೆಗಳಿಂದ ಅಕ್ರಮವಾಗಿ ಮಣ್ಣು ಸಾಗಾಟ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರೆ ಅವರು ನಾನು ವರ್ಗಾವಣೆ ಮಾಡಿಸಿಕೊಂಡು ಹೋಗುತ್ತೇನೆ ಎನ್ನುತ್ತಾರೆ. ಅಧಿಕಾರಿಗಳು ಸಚಿವರ ದೌರ್ಜನ್ಯಕ್ಕೆ ಬೇಸತ್ತು ಹೋಗಿದ್ದಾರೆ. ಅಕ್ರಮಗಳಿಗೆ ಬೆಂಬಲ ನೀಡುವ ಸ್ಥಿತಿಯಲ್ಲಿದ್ದಾರೆ. ಇಲ್ಲದಿದ್ದರೆ ಅಧಿಕಾರಿಗಳನ್ನು ಬೆದರಿಸುವ ಮೂಲಕ ಕೆಲಸ ಮಾಡಿಕೊಳ್ಳಲಾಗುತ್ತಿದೆ. ಕೆರೆಗಳ ಮಣ್ಣು, ಜಾಗ, ಕೃಷಿ ಇಲಾಖೆಯ ಜಾಗದಲ್ಲಿನ ಮಣ್ಣು ಲೂಟಿ ಹೊಡೆಯಲಾಗಿದೆ. ನಾನು ಅಕ್ರಮ ಮಣ್ಣು ಸಾಗಾಟ ತಡೆಯಲು ಪೊಲೀಸರು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳ ಜೊತೆ ಹೋಗಿದ್ದೆ. ಆದರೆ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಹಿಂಬಾಲಕರು ಬಂದು ದಬ್ಬಾಳಿಕೆ ನಡೆಸಿದರು ಎಂದು ಆರೋಪಿಸಿದರು.
ಇತರೆ ಸುದ್ದಿಗಳು