ವರದಿಗಾರರು :
MEENAKSHI RATOD ||
ಸ್ಥಳ :
BENGALORE
ವರದಿ ದಿನಾಂಕ :
20-08-2025
ಅಪ್ಪುಗೆ ಮಾಡಿದ ದ್ವಿತ್ವ ಕಥೆ ವೆಬ್ ಸಿರೀಸ್ ಆಗಲಿದೆ: ಪವನ್ಕುಮಾರ್
ನಿರ್ದೇಶಕ ಹಾಗೂ ನಟ ಪವನ್ಕುಮಾರ್, ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗಾಗಿ ಕಥೆಯೊಂದನ್ನ ಮಾಡಿ ಸಿನಿಮಾ ಮಾಡಲು ತಯಾರಿಯನ್ನ ಮಾಡಿಕೊಂಡಿದ್ದರು. ಆದ್ರೆ ವಿಧಿಯಾಟ ಆ ಸಿನಿಮಾ ಸೆಟ್ಟೇರಲಿಲ್ಲ. ಪುನೀತ್ ರಾಜ್ಕುಮಾರ್ ತುಂಬಾ ಇಷ್ಟಪಟ್ಟ ಕಥೆ ದ್ವಿತ್ವ ಆಗಿತ್ತು. ಇದೀಗ ಈ ಕಥೆ ಬಗ್ಗೆ ನಿರ್ದೇಶಕ ಪವನ್ಕುಮಾರ್ ಹೊಸ ವಿಚಾರವೊಂದನ್ನ ಹಂಚಿಕೊಂಡಿದ್ದಾರೆ. ಈ ಕಥೆ ವೆಬ್ ಸಿರೀಸ್ (Web Series) ಆಗಲಿದೆ ಅನ್ನೋ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ ಪವನ್ಕುಮಾರ್.
ದ್ವಿತ್ವ ಸಿನಿಮಾವನ್ನ ಪುನೀತ್ರಾಜ್ ಕುಮಾರ್ ಅವರಿಗಾಗಿ ಮಾಡುವುದಕ್ಕೆ ಅದ್ಧೂರಿಯಾಗಿ ಪ್ಲ್ಯಾನ್ ಮಾಡಿದ್ದ ನಿರ್ದೇಶಕ ಪವನ್ಕುಮಾರ್ ಆ ಕಥೆಯನ್ನ ಹಾಗೆ ಉಳಿಸಿಕೊಂಡಿದ್ದಾರೆ. ಮತ್ಯಾರಿಗೂ ಸಿನಿಮಾ ಮಾಡೋಕೆ ಮುಂದಾಗಿಲ್ಲ. ಈಗ ಆ ಕಥೆಯನ್ನ ವೆಬ್ ಸಿರೀಸ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಶೋಧ ಸಿನಿಮಾದ ಸುದ್ದಿಗೋಷ್ಠಿ ವೇಳೆ ಪ್ರತಿಕ್ರಿಯೆ ನೀಡಿದ್ದಾರೆ. ಅಂದಹಾಗೆ ದ್ವಿತ್ವ ಸಿನಿಮಾ ಅಂದುಕೊಂಡತಾಗಿದ್ರೆ ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಬೇಕಿತ್ತು. ಅಪ್ಪು ಅಭಿಮಾನಿಗಳಿಗೆ ಇದೊಂದು ವಿಭಿನ್ನ ರೀತಿಯ ಸಿನಿಮಾ ಕೊಡುವ ನಿಟ್ಟಿನಲ್ಲಿ ಪವನ್ಕುಮಾರ್ ಎಲ್ಲಾ ತಯಾರಿಯನ್ನ ಮಾಡಿಕೊಂಡಿದ್ದರು.
ನಿರ್ದೇಶಕ ಪವನ್ಕುಮಾರ್ ನಿರ್ದೇಶನದಿಂದ ಈಗ ನಟನೆಯ ಕಡೆ ವಾಲಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಸಿನಿಮಾದಲ್ಲಿ ನಟಿಸಿದ್ದ ಪವನ್ಕುಮಾರ್, ಇದೀಗ ಶೋಧ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ವೇಳೆ ದ್ವಿತ್ವ ಕಥೆ ಬಗ್ಗೆ ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಇರುವ ಈ ದ್ವಿತ್ವ ಕಥೆ ಸದ್ಯದಲ್ಲೇ ವೆಬ್ ಸಿರೀಸ್ ಆಗುವ ಸುಳಿವು ನೀಡಿದ್ದಾರೆ ನಿರ್ದೇಶಕ ಪವನ್ಕುಮಾರ್. ಸಿನಿಮಾವಾಗುತ್ತೋ…? ಅಥವಾ ವೆಬ್ ಸಿರೀಸ್ ಆಗುತ್ತೋ ಕಾದು ನೋಡಬೇಕು.
