ವರದಿಗಾರರು :
ಸುರೇಶ ||
ಸ್ಥಳ :
ಹಾಸನ
ವರದಿ ದಿನಾಂಕ :
25-11-2025
ನಾಲೆಯಲ್ಲಿ ಬಿದ್ದು ದಂಪತಿ ಸಾವು
ಚನ್ನರಾಯಪಟ್ಟಣ: ನಾಲೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ದಂಪತಿ ನೀರುಪಾಲಾಗಿರುವ ಘಟನೆ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಗೋಪಾಲ್ (27), ದೀಪು (24) ಮೃತ ದಂಪತಿ. ಭಾನುವಾರ ಹೇಮಾವತಿ ನಾಲೆಯಲ್ಲಿ ಬಟ್ಟೆ ತೊಳೆಯಲು ದಂಪತಿ ತೆರಳಿದ್ದರು. ಬಟ್ಟೆ ತೊಳೆಯುವಾಗ ದೀಪು ಕಾಲು ಜಾರಿ ನಾಲೆಗೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಗೋಪಾಲ್, ಪತ್ನಿಯನ್ನು ರಕ್ಷಿಸಲು ನಾಲೆಗೆ ಇಳಿದರು. ಆದರಡ ನಾಲೆಯಲ್ಲಿ ನೀರು ಭಾರೀ ಪ್ರಮಾಣದಲ್ಲಿ ರಭಸವಾಗಿ ಹರಿಯುತ್ತಿದ್ದ ಕಾರಣದಿಂದ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಎಷ್ಟು ಹೊತ್ತು ಕಳೆದರೂ ದಂಪತಿ ಮನೆಗೆ ಬಾರದಿದ್ದರಿಂದ ಕುಟುಂಬ ಸದಸ್ಯರು ಎಲ್ಲೆಡೆ ಹುಡುಕಾಟ ನಡೆಸಿದರು. ನಂತರ ನಾಲೆ ಬಳಿ ನೋಡಿದಾಗ ದಡದಲ್ಲಿದ್ದ ಬಟ್ಟೆಗಳನ್ನು ನೋಡಿದಾಗ ದಂಪತಿ ನೀರು ಪಾಲಾಗಿರುವುದು ಗೊತ್ತಾಗಿದೆ. ಬಳಿಕ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಇಂದು ಅಗ್ನಿಶಾಮಕದಳದ ಸಿಬ್ಬಂದಿ ನಾಲೆಯಲ್ಲಿ ಶೋಧಕಾರ್ಯ ನಡೆಸಿದರು. ಈ ವೇಳೆ ನಾಲೆಯಲ್ಲಿ ಗೋಪಾಲ್ ಮೃತದೇಹ ಪತ್ತೆಯಾಗಿದೆ. ದೀಪು ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
